ನ.24: `ಅಂಬರ್ ಕ್ಯಾಟರರ್ಸ್'  ಕರಾವಳಿಯಾದ್ಯಾಂತ ಬಿಡುಗಡೆ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.20: ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದ ಪ್ರಸ್ತುತಿಯಲ್ಲಿ ಸಿದ್ಧಗೊಂಡ ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರರ್ಸ್' ತುಳು ಸಿನೆಮಾ ನ.24ರ ಶುಕ್ರವಾರ ಸಿನಿಪ್ರೇಕ್ಷಕರಿಗೆ ಹಾಸ್ಯದ ಕಚಗುಳಿಯಿಡಲು ಕರ್ನಾಟಕದ ಕರಾವಳಿಯಾದ್ಯಾಂತ ಬಿಡುಗಡೆ ಆಗಲಿದೆ ಎಂದು ಭಂಡಾರಿ ಸಮಾಜದ ಮುತ್ಸದ್ಧಿ, ಕೊಡುಗೈದಾನಿ, ಭಂಡಾರಿ ಮಹಾಮಂಡಲದ ಸಂಸ್ಥಾಪಕ, ಸಿನೆಮಾ ನಿರ್ಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

 

 

ಇಂದಿಲ್ಲಿ ಸೋಮವಾರ ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಸುರೇಶ್ ಎಸ್.ಭಂಡಾರಿ, ಅಂಬರ್ ಕ್ಯಾಟರರ್ಸ್ ಮೂಲಕ ತುಳುಚಿತ್ರರಂಗಕ್ಕೆ ನನ್ನ ಸುಪುತ್ರ, ಅಪ್ರತಿಮ ಕಲಾವಿದ, ಚಲನಚಿತ್ರ ರಂಗದ ಹೊಸ ಪ್ರತಿಭೆಯಾಗಿ ಇದೀಗಲೇ ಸೂಪರ್‍ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ಸೌರಭ್ ಭಂಡಾರಿ ಅವರನ್ನು ಪರಿಚಯಿಸಿದ್ದೇವೆ. ಕರಾಟೆಯಲ್ಲಿ ಬ್ಲ್ಯಾಕ್‍ಬೆಲ್ಟ್ ಆಗಿದ್ದು, ಸದ್ಯ ತೌಳವ ಸೂಪರ್‍ಸ್ಟಾರ್ ಎಂದೇ ಪ್ರಸಿದ್ಧಿಯ ಸೌರಭ್ ಭಂಡಾರಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಬಾಲ್ಯದಿಂದಲೇ ನಟ ಆಗಬೇಕೆಂಬ ಆತನ ಸೌರಭ್ ಕನಸು ಈ ಸಿನಿಮಾ ಮೂಲಕ ನನಸಾಗಿಸಿದ್ದೇವೆ. ನಿರ್ದೇಶಕ ಜೈಪ್ರಸಾದ್ ಬಜಾಲ್ ಚಿತ್ರ ರಚನೆ ಮತ್ತು ನಿರ್ದೇಶನದಲ್ಲಿ ರಚಿಸಲ್ಪಟ್ಟ ಈ ಚಿತ್ರದಲ್ಲಿ ಸ್ಯಾಂಡಲ್‍ವುಡ್ ನಟಿ ಸಿಂಧು ಲೋಕನಾಥ್ ನಾಯಕಿ ನಟಿಯಾಗಿ ಸೌರಬ್‍ಗೆ ಸಾಥ್ ನೀಡಿದ್ದು, ಸೌರಬ್ ನಟನೆ ಹಾಗೂ ಡಾನ್ಸ್ ನೋಡಿ ಇಡೀ ಚಿತ್ರತಂಡವೇ ದಂಗಾಗಿದ್ದು ಈ ಯುವಪ್ರತಿಭೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ ಎಂದು ಚಲನಚಿತ್ರ ಲೋಕದ ದಿಗ್ಗಜರ ಮಾತಾಗಿದೆ. ಆದುದರಿಂದ ಅತ್ಯಾಧಿಕ ಸಂಖ್ಯೆಯಲ್ಲಿ ಈ ಚಿತ್ರವನ್ನು ನೋಡಿ ಚಿತ್ರಪ್ರೇಮಿಗಳೇ ಇಂತಹ ಯುವ ಪ್ರತಿಭೆಗೆ ಆಶೀರ್ವದಿಸಿ ಭವ್ಯ ಭವಿಷ್ಯ ರೂಪಿಸಬೇಕು ಎಂದರು.   

ಅಂಬರ್ ಕ್ಯಾಟರರ್ಸ್ ಚಿತ್ರವು ಯಾವುದೇ ಬಾಲಿವುಡ್ ಸಿನಿಮಾಕ್ಕೂ ಕಡಿಮೆಯಿಲ್ಲದಂತೆ ಮೂಡಿಬರಬೇಕು ಎಂಬ ಕಾರಣಕ್ಕೆ ನಾವು ಈ ಚಿತ್ರ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಸ್ಯಾಂಡಲ್‍ವುಡ್‍ನ ನಟರಾದ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ಕರಾವಳಿಯ ಅನುಭವಿ ರಂಗನಟ ಮತ್ತು ಸಿನೆಮಾ ತಾರೆಯರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ ಇವರ ಅಭಿನಯದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ. ಚಿತ್ರದ ತಾಂತ್ರಿಕ ವರ್ಗದಲ್ಲೂ ನುರಿತ ವ್ಯಕ್ತಿಗಳನ್ನೇ ಆರಿಸಿಕೊಂಡಿದ್ದೇವೆ. ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕಣ್ಣಿನಲ್ಲಿ ಇಡೀ ಸಿನಿಮಾ ಮೂಡಿ ಬಂದಿದ್ದು ಪ್ರತಿಯೊಂದು ದೃಶ್ಯ ಕೂಡಾ ಕಣ್ಣಿಗೆ ಮುದನೀಡಲಿದೆ ಇದನ್ನು ರಾಷ್ಟ್ರದ ಸರ್ವ ಸಿನೆಮಾಪ್ರಿಯರು ನೋಡುವಂತಿದೆ ಎನ್ನುವ ಆಶಯ ನಮ್ಮದು ಎಂದೂ ನಿರ್ಮಾಪಕ ಸುರೇಶ್ ಭಂಡಾರಿ ತಿಳಿಸುತ್ತಾ ಈ ರಸದೌತಣ ಸವಿಯಲು ಸಿದ್ಧರಾಗಿರಿ ಎಂದು ನಾಡಿನ ಸಮಸ್ತ ಜನತೆಗೆ ಆಹ್ವಾನಿಸಿದರು.

 

 

ಈ ಚಿತ್ರಕ್ಕೆ  ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ. ಅದರಲ್ಲೂ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್ ಮಹಾದೇವನ್ ಹಾಡಿರುವ ಜೈ ಹನುಮಾನ್ ಮತ್ತು ವಿಸ್ಮಯ ವಿನಾಯಕ್ ಹಾಡಿರುವ ಲಿಂಗುನ ಪುಲ್ಲಿನ ಹಾಡುಗಳು ಚಾರ್ಟ್ ಬಸ್ಟರ್‍ಗಳಾಗಿವೆ. ತುಳು ಭಾಷೆಯ ಮೇಲಿನ ಅನನ್ಯ ಪ್ರೀತಿಯಿಂದ ಈ ಸಿನಿಮಾ ಸುರೇಶ್ ಎಸ್.ಭಂಡಾರಿ ನಿರ್ಮಿಸಿದ್ದಾರೆ. ಅಂಬರ್ ಕ್ಯಾಟರರ್ಸ್ ಒಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಆಗಿದ್ದು ಸಂಪೂರ್ಣ ಕಾಮಿಡಿ ಕತೆಯನ್ನು ಹೊಂದಿದೆ. ಚಿತ್ರದ ಹಾಡುಗಳನ್ನು ಈಗಾಗಲೇ ಸಂಗೀತಪ್ರಿಯರು ಮೆಚ್ಚಿಕೊಂಡಿದ್ದು ಚಿತ್ರವೂ ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ ಎಂದು ಚಿತ್ರದ ನಾಯಕ ನಟ ಸೌರಭ್ ಸುರೇಶ್ ಭಂಡಾರಿ ತಿಳಿಸಿದರು.

2016ನೇ ಅ.16ರಂದು ಉಡುಪಿ ಬಾರ್ಕೂರು ಅಲ್ಲಿನ  ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆವರಣದಲ್ಲಿ  ವಿಶ್ವನಾಥ ಶಾಸ್ತ್ರಿ ಬಾರ್ಕೂರು ಇವರ ಶುಭಾನುಗ್ರಹದೊಂದಿಗೆ ಕನ್ನಡ ಚಲನಚಿತ್ರದ ಯಶಸ್ವಿ ನಿರ್ದೇಶಕ ಎಂ.ಡಿ ಶ್ರೀಧರ್ ಕ್ಲಾಪ್ ಮಾಡಿ ಮುಹೂರ್ತ ನೆರವೇರಿಸಿದ್ದರು. ಹರೀಶ್ ಕೊಟ್ಟಾಡಿ, ದೇವಿಪ್ರಕಾಶ್, ವಿಜಯಕುಮಾರ್ ಕೋಡಿಯಾಲ್‍ಬೈಲ್, ನಿತಿನ್ ಬಂಗೇರ ಚಿಲಿಂಬಿ, ಪ್ರಶಾಂತ್ ಆಳ್ವ, ಸತೀಶ್ ಬ್ರಹ್ಮವಾರ, ಲತೀಶ್ ಪೂಜಾರಿ ಮಡಿಕೇರಿ, ಅಭಿಷೇಕ್ ಧರ್ಮಪಾಲ್ ಶೆಟ್ಟಿ ಮತ್ತಿತರರ ಸಹಕಾರದಲ್ಲಿ ಯೋಗ್ಯವಾಗಿ ಮೂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಾಯಿ ಕೃಷ್ಣ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಉಪಸ್ಥಿತರಿದ್ದರು.

 

Latest News

Copyright © 2016 - www.kadandalesureshbhandary.com. Powered by eCreators

Home | About Us | NewsSitemap | Contact